ಮಲೆಗಳಲ್ಲಿ ಮದುಮಗಳು-
ಕಾದಂಬರಿಯಲ್ಲಿ ಬರುವ ಮಲೆನಾಡಿನ ಜೀವನ ಚಿತ್ರಣ- ೩೦೦ ಪುಟಗಳ ಮಿತಿ
ಭಾಗ- ೪
ನಾಟಿ ವೈದ್ಯರ ಬಗ್ಗೇನೂ ಕಾದಂಬರಿ ಗಮನ ಸೆಳೆಯುತ್ತದೆ. ಗ್ರಾಮೀಣ ಪರಿಸರದ ಖಾಯಿಲೆಗಳು ನಿವಾರಣೆಯಾಗಬಲ್ಲ ಆಶಾವಾದವನ್ನು ಈ ನಾಟಿ ವೈದ್ಯರಲ್ಲಿ ಇಡುತ್ತಿದ್ದರು. ಈ ಕಾದಂಬರಿಯಲ್ಲಿ " ಕಣ್ಣಾ " ಪಂಡಿತರು ನಾಟಿ ವೈದ್ಯಕ್ಕೆ ಹೆಸರಾದ ಮಲೆಯಾಳಿ ಪಂಡಿತರು . ಸಮೀಪದಲ್ಲಿ ಲಭ್ಯವಿರುವ ಸೊಪ್ಪು, ಬೇರು , ಗಡ್ಡೆಗಳೇ ವೈದ್ಯಕೀಯ ಮೂಲಿಕೆ . ಇವುಗಳಲ್ಲದೆಯೇ ಮಂತ್ರ ತಂತ್ರ ಮುಂತಾದವುಗಳ ನಂಬಿಕೆಯ ಕಲ್ಪನೆಯೂ ಕಂಡುಬರುತ್ತಿದೆ. ( ಇಂದಿಗೂ )
ಗುತ್ತಿ " ನನಗೊಂದು ಅಂತ್ರ ಬೇಕಿತ್ರಲ್ಲೋ "ಎನ್ನುವ ಬೇಡಿಕೆಯನ್ನು ಕಣ್ಣಾ ಪಂಡಿತರಲ್ಲಿ ಇಡುತ್ತಾನೆ . ಇಂದಿಗೂ ಮಲೆನಾಡಿನಲ್ಲಿ "ತುಂಡೆ " ಹಾಕುವದು ದೃಷ್ಟಿ ತೆಗೆಯುವದು .... ಮುಂತಾದ ವಿಧಾನ ಬಳಕೆಯಲ್ಲಿರುವದನ್ನು ಗಮನಿಸಿದರೆ , ಅದರ ಪ್ರಭಾವ / ನಂಬಿಕೆಯ ಕುರಿತಾಗಿ ಯೋಚಿಸಬಹುದು . ಮಲೆನಾಡಿನಲ್ಲಿ ಇಂದಿಗೂ ಊರಿಗೊಬ್ಬರಂತೆ ನಾಟಿ ವೈದ್ಯರಿರುವದು - ಈ ಎಲ್ಲ ನಂಬಿಕೆ ಇನ್ನು ಚಾಲ್ತಿಯಲ್ಲ್ಲಿರುವದಕ್ಕೆ ಸಾಕ್ಷಿ. ಜೊತೆಗೆ ಇಂದಿನ ವಿವಿಧ ರೋಗಗಳ specialist ಇರುವಂತೆ ಒಂದೊಂದು ರೋಗಕ್ಕೆ ಮಾತ್ರ ಮೂಲಿಕೆ ನೀಡುವ ಪಂಡಿತರು ಇರುತ್ತಿದ್ದರು. ಅದು ಹೆಚ್ಚಿನ ಸಲ ಪರಂಪರಾಗತವಾಗಿ ಬಂದ ವೃತ್ತಿಯೂ ಆಗಿರುತ್ತಿತ್ತು . ಹಾಗೇನೆ ಮೂಲಿಕೆಯ ಬಗ್ಗೆ ಗೌಪ್ಯ ಕಾದುಕೊಳ್ಳುತ್ತಿದ್ದರು .
( ಇಂದಿಗೂ )
ಆಹಾರ ಪಾನೀಯಗಳ ವಿಚಾರಕ್ಕೆ ಬಂದಾಗ ಆರ್ಥಿಕವಾಗಿ ದುರ್ಬಲವಾಗಿರುವವರು ಗಂಜಿಯೂಟ ಮಾಡುತ್ತಿದ್ದರು ." ಕುಳವಾಡಿ ಸಣ್ಣನ ಮಗಳು ಪುಟ್ಟಿ ಗಂಜಿ ತಯಾರಿಸುತ್ತಿದ್ದಳು ."
" ಕೆಲಸಕ್ಕೆ ಹೋಗುವ ಮುನ್ನ ಗಂಜಿ ಕುಡಿದು ಹೋಗುತ್ತಿದ್ದರು ." ಊಟ ಇದೇ !
"ಈ ಕಾದಂಬರಿಯಲ್ಲಿ ಅಷ್ಟೇ ಅಲ್ಲ ಹೆಗ್ಗಡತಿಯಲ್ಲೂ ಆಹಾರ -ಪಾನೀಯ ವಿಷಯಕ್ಕೆ ಬಂದಾಗ ವಿಶೇಷ ಆಕರ್ಷಣೆಯೆಂದರೆ , ಬಾಡು, ತುಂಡು, ಗಂಜಿಯೂಟ , ಸೀ ಊಟ , ಕಳ್ಳು , ಬಗನಿ - ಈ ರೀತಿಯ ಪದ ಬಳಕೆಗಳು ಪುಟಕ್ಕೊಮ್ಮೆಯಾದರು ಮೇಲಿಂದ ಮೇಲೆ ಕಾಣ ಸಿಗುತ್ತವೆ. ಒಂದೊಂದು ವರ್ಗದ ಜನರ ಅಂತಸ್ತು , ಆರ್ಥಿಕ ಸ್ಥಿತಿ - ಗತಿಗಳನ್ನು ಸೂಚಿಸಬಲ್ಲವು "- ಎಂದು ಡಾ . ಗುರುಪಾದ ಮರಿಗುದ್ದಿಯವರು
ಅಭಿಪ್ರಾಯಪಡುತ್ತಾರೆ .
ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಮಲೆನಾಡಿನಲ್ಲಿ ಬಳಕೆಯಾಗುವ ಅನೇಕ ರಕ್ಷಣಾತ್ಮಕ ವಸ್ತುಗಳು ಕಾಣಿಸಿಕೊಳ್ಳುತ್ತದೆ . ಕಂಬಳಿ ಕೊಪ್ಪೆ( ಮಳೆಯಿಂದ ರಕ್ಷಣೆ) ಗೊರಬು ( ಮಳೆಯಿಂದ ರಕ್ಷಣೆ - ಗೊರಬಿನ ಚಿತ್ರಣ ತೇಜಸ್ವಿಯವರ ಕೃತಿಗಳಲ್ಲೂ ಬೇಕಾದಷ್ಟು .... ಸಿಗುತ್ತವೆ.) ಹಾಳೆ ಟೊಪ್ಪಿಗೆ , ಎಲೆ ವಸ್ತ್ರ ..... ಮಳೆ ಬಿಸಿಲುಗಳಿಂದ ರಕ್ಷಿಸಿಕೊಳ್ಳುವ ವಸ್ತುಗಳು . ಆಯಾ ಕೆಲಸಗಳಿಗೆ ತಕ್ಕಂತೆ ವೇಷ ಧರಿಸುವದು ಇಂದಿಗೂ ಅಲ್ಲಿನ ಪರಿಸರಕ್ಕೆ ಅನಿವಾರ್ಯವೇ! ಇಂದು , ಅಂದಿನ ಕಂಬಳಿ ಕೊಪ್ಪೆಯ ಬದಲಿಗೆ ಪ್ಲಾಸ್ಟಿಕ್ ಧಾಳಿ ಇಟ್ಟರೂ ಭಯಂಕರ ಮಳೆಯ ತಡೆಗೆ ಕಂಬಳಿ ಅತ್ಯವಶ್ಯಕವೇ ಆಗಿರುತ್ತದೆ . ಕಾದಂಬರಿಯ ಆರಂಭದಲ್ಲಿ ಗುತ್ತಿ ಸಿಂಬಾವಿಗೆ ಹೊರಟಿದ್ದ. ಹೆಗಲಿಗೆ ಕಂಬಳಿ ಕೊಪ್ಪೆ ಹಾಕಿದ್ದ ಎಂಬ ಅಂಶವನ್ನು ಗಮನಿಸಬಹುದು.
ಕುವೆಂಪು ಕಾದಂಬರಿಗಳು ಮಲೆನಾಡಿನ ಬೇಟೆಯ ಚಿತ್ರಣ, ತಂತ್ರ ವಿವರಗಳನ್ನು ನೀಡುವ ಅಪರೂಪದ ಕೃತಿಗಳಾಗಿವೆ . ಪ್ರಾಣಿ ಬೇಟೆ ಪುರುಷರಿಗೆ ಮೀಸಲಾದರೆ , ಹಕ್ಕಿ ಮೀನುಗಳೆಲ್ಲಾ ಸ್ತ್ರೀಯರಿಗೆ ಮಕ್ಕಳಿಗೆ ಪ್ರಧಾನವಾಗಿತ್ತು . ಈ ಎರಡೂ ಕಾದಂಬರಿಯಲ್ಲಿ ಕಂಡು ಬರುವ ಬೇಟೆಯ ಚಿತ್ರಣ ಮಲೆನಾಡಿಗರ ಧೈರ್ಯ ಸಾಹಸಗಳ ಪ್ರತಿಬಿಂಬ . ಅವರ ಹೋರಾಟದ ಬದುಕಿಗೂ ಸಾಕ್ಷಿ ಹೇಳುತ್ತವೆ.
ಮಲೆನಾಡಿಗರು ಖಾಯಿಲೆ ಕಸಾಲೆಗಳಲ್ಲಿ ಎರಡು ರೀತಿಯ ಔಷಧ ಉಪಚಾರ ಕೈಗೊಳ್ಳುತ್ತಿದ್ದರು . ಈ ಕಾದಂಬರಿಯಲ್ಲೇ ಇದನ್ನು ಗಮನಿಸಬಹುದು . ಒಂದು ನಿಸರ್ಗೋಪಚಾರ ಮತ್ತೊಂದು ಮಂತ್ರೋಪಚಾರ . ಒಂದು ತಂತ್ರ ವಿದ್ಯೆಗೆ " ಭೂತ ಜಕ್ಕಿಣಿ ಪಂಜ್ರೋಲ್ಲಿಗೆ ಹರಕೆ ಕೊಡುವದು ' ಎಂಬ ಪ್ರಸ್ತಾಪ , ಇಂಬಳಗಳಕಾಟ ತಪ್ಪಿಸುವದಕ್ಕೆ ಉಪ್ಪು ಸುಣ್ಣ ಮಿಶ್ರಣ ಮಾಡಿ ಬಳಸುವದು , ಹೋಗೆ ಸೊಪ್ಪನ್ನು ಇಂಬಳಗಳ ಮೇಲೆ ಹಾಕುವದು , ಮೈಗೆ ಗಾಯವಾಗಿ ನಂಜಾದರೆ ಕಾಡು ಜೀರಿಗೆ ಮತ್ತು ಅರಿಸಿನ ಅರೆದು ಗಾಯಕ್ಕೆ ಹಚ್ಹ್ಚುವದು ..... ಇತ್ಯಾದಿ.
ಕುವೆಂಪು ಮಲೆನಾಡಿನ ವಾಸ್ತವ ಚಿತ್ರಣ ಕೊಟ್ಟಿರುವುದನ್ನು ನಿಮ್ಮ ಪ್ರಬಂಧದಲ್ಲಿ ಚೆನ್ನಾಗಿ ವಿವರಿಸಿದ್ದಿರಿ. ಧನ್ಯವಾದಗಳು.
ಪ್ರತ್ಯುತ್ತರಅಳಿಸಿ