ಮಲೆಗಳಲ್ಲಿ ಮದುಮಗಳು- ಕಾದಂಬರಿಯಲ್ಲಿ ಬರುವ ಮಲೆನಾಡಿನ ಜೀವನ ಚಿತ್ರಣ- ೩೦೦ ಪುಟಗಳ ಮಿತಿ
ಭಾಗ-೫
ದಿನನಿತ್ಯದ ಕೆಲಸದ ವಿಷಯಕ್ಕೆ ಬಂದರೆ, ' ಶ್ರಮ ವಿಭಜನೆಯ " ತತ್ವ ಅಡಕವಾಗಿರುವ ಬಗೆ ಕಾಣಬಹುದು . ಸ್ತ್ರೀಯರಿಗೆ ನೀಡುವ ಕೆಲಸವೇ ಬೇರೆ ಗಂಡಾಳುಗಳಿಗೇ ಪ್ರತ್ಯೇಕ ಕೆಲಸ. ಪುಟ ೧೧೨ ದಲ್ಲಿ " ಕೋಣೂರಿನ ಅಡಕೆ ತೋಟದ ಒಂದು ಮೂಲೆಯಲ್ಲಿ ರಂಗಪ್ಪ ಗೌಡರ ಗಟ್ಟದಾಳುಗಳು - ಚಿಂಕ್ರ , ಪಿಜಿಣ , ಐತ , ಮೊಡಂಕಿಲ - ಹಿಂದಿನ ದಿನದ ಬಿರುಗಾಳಿ ಮಳೆಯಲ್ಲಿ ಉರುಳಿ ಅಡಕೆಯ ಮರಗಳ ಮೇಲೆ ಬಿದ್ದಿದ್ದ ಒಂದು ದೊಡ್ಡ ಅತ್ತಿಯ ಮರವನ್ನು ಸವರಿ ಕಡಿಯುವ ಕೆಲಸದಲ್ಲಿ ತೊಡಗಿದ್ದರು . ಅವರ ಹೆಣ್ಣಾಳುಗಳು - ದೇಯಿ , ಅಕ್ಕಣಿ , ಪೀಂಚಲು , ಬಾಗಿ - ತಮ್ಮ ಗಂಡಸರಿಗೆ ನೆರವಾಗಿ , ಸವರಿದ ಸೊಪ್ಪನ್ನು ಅಡಕೆಯ ಮರಗಳ ಬುಡದ ಮೇಲುಸೊಪ್ಪಿನ ಜಿಗ್ಗು ಮುಚ್ಚುವಂತೆ ಹೊತ್ತು ಹಾಕುತ್ತಿದ್ದರು " ಎಂಬ ಮಾತಿನಲ್ಲಿ ಮೇಲಿನ ಕೆಲಸ ವಿಭಜನೆಯ ಪರಿಕ್ರಮವನ್ನು ದರ್ಶಿಸಬಹುದು .
ಆಧುನಿಕತೆಯ ಪ್ರಭಾವದಿಂದ ದೂರವಿದ್ದು ಬಾಳಿದ ಜನರು ದುಡಿಮೆಯಲ್ಲಿಯೇ ತತ್ಪರರಾಗಿದ್ದು , ವಿದ್ಯಾಭ್ಯಾಸದ ಕುರಿತಾಗಿ ಸಾಂಪ್ರದಾಯಿಕ ಭಾವನೆಗಳು ಮನೆಮಾಡಿಕೊಂಡಿದ್ದವು .ಅದರಲ್ಲಿಯೂ ಸ್ತ್ರೀ ವಿದ್ಯಾಭ್ಯಾಸವಂತು " ಗಂಡುಮಕ್ಕಳಿಗೇ ಅಪೂರ್ವವೂ , ಅಸಾಧ್ಯವೂ ಅತಿ ವಿರಳವೂ ಆಗಿದ್ದ ಓದು ಬರಹವನ್ನು ಸ್ತ್ರೀಯರಿಗೆ ಕಲಿಸಲು ಯಾರೂ ಒಪ್ಪುತ್ತಿರಲಿಲ್ಲ . ಹೆಂಗಸರು ಓದು ಕಲಿಯುವದು ಗಂಡಸರು ಸೀರೆಯುಡುವದಕಿಂತಲೂ ಹಾಸ್ಯಾಸ್ಪದವಾಗಿತ್ತು " ಎನ್ನುವ ಮಾತು ಪುಟ ೮೧ ರಲ್ಲಿ ಕಾಣ ಸಿಗುತ್ತದೆ .
ಕೊನೆಯಲ್ಲಿ ,
ಕಾದಂಬರಿಯ ಭಾಷೆಯನ್ನು ಗಮನಿಸಿದಾಗ , ಹಲವಾರು ಜಾತಿ, ವರ್ಗಗಳ ಜನರ ಆಡು ಮಾತು ಬಳಕೆಯಾಗಿದೆ. ಕಾದಂಬರಿಯ ನಿರೂಪಣೆಯಲ್ಲಿ ಕೃತಿಕಾರ ತನ್ನ ಭಾಷೆಯನ್ನು ಬಳಸಿಕೊಂಡರೂ , ಸಂಭಾಷಣೆ ಆಯ ವರ್ಗಗಳ ಭಾಷೆಯಲ್ಲೇ ಇದೆ! ಪಡೆನುಡಿ , ಗಾದೆಮಾತು , ಕಾವ್ಯಾತ್ಮಕ ದೀರ್ಘ ವಾಕ್ಯ ಕಾದಂಬರಿಗೆ ಮೆರುಗು ನೀಡಿವೆ.
ಗ್ರಾಮೀಣ ಮಾತಿನ ಧಾಟಿ ಅಭಿವ್ಯಕ್ತಿಗೆ ಅವರದೇ ಆದ ಭಾಷೆಯ ಬಳಕೆಗೆ ಒಂದು ಉದಾಹರಣೆ : ಪುಟ ೫೩ ರಲ್ಲಿ ಹೂವಲ್ಲಿ ವೆಂಕಟಣ್ಣನಿಗೂ , ಹಳೆಮನೆ ಸುಬ್ಬಣ್ಣ ಹೆಗ್ಗಡೆಗೂ ಹಂದಿಯ ವ್ಯವಹಾರದಲ್ಲಿ ನಡೆವ ಮಾತು- ಕತೆ
" ನೀ ಒಳ್ಳೆ ಗಿರಾಸ್ತ ಕಣೋ ! ಅಲ್ಲಾ ನಿನ್ನೆ ಬತ್ತೀನಿ ಅಂದಾವ "
" ನಾ ಏನ್ ಮಾಡದ್ರಾ ? ಹ್ಯಾಂಗಾರೆ , ಆ ಸನಿ ಮಕ್ಳು ಬತ್ತೀನಿ ಅಂದೋರು ಬರ್ಲೆ ಇಲ್ಲಾ . ಕಾದೆ ಕಾದೆ ..... ಹೊತ್ತಾಗಿ ಹೋತು . ಇನ್ನೇನ್ ಮಾಡಾದು ..... ನಾಳೆ ಬೆಳಿಗೆ ಹೋಗಾನ ಅಂತಾ ಹೇಳಿ ನಿಂತಬಿಟ್ಟೆ "
" ಯಾರಿಗೆ ಹೇಳಿದ್ಯೋ ?"
" ನಿಮ್ಮ ಹೊಲೇರಿಗೇ ಹೇಳಿದ್ದೆ "
" ನೀ ಒಳ್ಳೆ ಗಿರಾಸ್ತ . ಅವರು ತ್ವಾಟದ ಬೇಲಿ ಮಾಡಾದ್ ಬಿಟ್ಕಂಡು ನಿನ್ನ ಹಂದಿ ಹೊರಾಕೆ ಬತ್ತಾರೆ ? ನೀ ಬೇಕಾದ್ರೆ ಒಳ್ಳೆ ಗಿರಾಸ್ತ !"
" ಹಾಂಗ್ಯಾರೆ ಏನ್ ಮಾಡ್ಲಿ ಹೇಳಿ .... ನಿನ್ ನಾನ್ ಹೊತ್ಕಂಡ್ ಹೊ'ಬೇಕು ಅದಕ್ಕೂ ಸೈ ಅಂತಿದ್ದೆ ಕಾಲುಂದ್ ಹಿಂಗಾತಲ್ಲ ಹೇಳಿ "
" ಏ ' ನಾತೋ ?"
" ಹಾಂಗ್ಯಾರೆ , ಆವತ್ತು ಮರಸಿಗೆ ಕೂತಿದ್ದೆ. ಹೋದ ತಿಂಗಳು ಬೆಳಕಿನಾಗೆ ಒಂದು ಮೊಲ ಬಂತು . ಹೊಡೆದೆ , ಇಳಿದು ಹೇರಕಿಕೊಳ್ಲಾಕ್ ಹೊಗಾಕೂ ತೆವಳಿಕೂತ ತೆವಳಿಕೂತ ಹೋಗಾಕೆ ಸುರು ಮಾಡ್ತು , ಏಟು ಓಡಾಡ್ಸಿದ್ರೂ ಸಿಕ್ ಒಲ್ ದು . ಬಯ್ ಲು ತುಂಬಾ ಒಡ್ಯಾಡ್ಸಿ ಸಾಕಾಗಿ ಹೊ'ತು ಅಂತೀನಿ . ಹ್ಯಾಂಗಾರೆ ಹಾಳು ಮುಂಡೆದಕ್ಕೆ ದೊಣ್ಣೆ ೕ ನೇ ಸೈ ಅಂತಾ ಒಂದು ಬಡಿಕೆ ತಗೊಂಡು ಜಪ್ಪದೆ . ಅದರ ಕೊರ್ಲು ಹೊಡ್ದುಬಿಡ್ತು ನೋಡಿ . ಹ್ಯಾಂಗಂತ , ಹೆಚ್ಚಿನ ನೆತ್ರೂ ಬರ್ಲೂ ಇಲ್ಲ..... ಅದೇ ಗಾಯ ದೊಡ್ದಾಯ್ತು , ಕಡೀಗೆ ಕುಂಟನ ಹುಣ್ಣಿಗೆ ತಿರಗ್ತೂ ..."ಭಾವಾವೇಗ , ಭಾವ ತೀವ್ರತೆ ಅದ್ಭುತ ....
ಪ್ರಸ್ತುತ ಸಂದರ್ಭಕ್ಕೆ ಇದನ್ನು ಅನ್ವಯಿಸಿ ನೋಡಿದಾಗ ಅನೇಕ ವೈರುಧ್ಯಗಳು ಕಂಡುಬರುತ್ತಿವೆ . ಕುವೆಂಪು ಅಂದು ಚಿತ್ರಿಸಿದ ಅಭೇದ್ಯ ಅರಣ್ಯ ಇಂದು ಉಳಿದಿಲ್ಲ . ಅಂದಿನ ಅನೇಕ ಕವಿ/ ಸಾಹಿತಿಗಳಿಗೆ " inspiration " ಆಗಿರುತ್ತಿದ್ದ ವನಸಿರಿ ಆಧುನಿಕತೆಯ ಭಯಂಕರತೆಗೆ ಸಿಕ್ಕು ತನ್ನ ಹಸಿರಿನ ಉಸಿರನ್ನು ಕಳೆದುಕೊಳ್ಳುತ್ತಿದೆ.
" ಹಸುರೆತ್ತಲ್ , ಹಸುರಿತ್ತಲ್ "- ಹಸುರು ಎತ್ತಲೂ ಇಲ್ಲದಾಗುತ್ತಿರುವದು ಶೋಚನೀಯ .
...........................................ಮುಕ್ತಾಯ ................................
ಚಂದ್ರಿಕಾ ಹೆಗಡೆ