18 ಡಿಸೆಂಬರ್ 2012


ಮಲೆಗಳಲ್ಲಿ ಮದುಮಗಳು- ಕಾದಂಬರಿಯಲ್ಲಿ ಬರುವ ಮಲೆನಾಡಿನ ಜೀವನ ಚಿತ್ರಣ- ೩೦೦ ಪುಟಗಳ ಮಿತಿ


ಭಾಗ-೫



ದಿನನಿತ್ಯದ  ಕೆಲಸದ ವಿಷಯಕ್ಕೆ ಬಂದರೆ, ' ಶ್ರಮ ವಿಭಜನೆಯ " ತತ್ವ ಅಡಕವಾಗಿರುವ  ಬಗೆ ಕಾಣಬಹುದು . ಸ್ತ್ರೀಯರಿಗೆ  ನೀಡುವ ಕೆಲಸವೇ ಬೇರೆ  ಗಂಡಾಳುಗಳಿಗೇ  ಪ್ರತ್ಯೇಕ ಕೆಲಸ. ಪುಟ ೧೧೨ ದಲ್ಲಿ " ಕೋಣೂರಿನ  ಅಡಕೆ ತೋಟದ ಒಂದು ಮೂಲೆಯಲ್ಲಿ ರಂಗಪ್ಪ ಗೌಡರ ಗಟ್ಟದಾಳುಗಳು  - ಚಿಂಕ್ರ , ಪಿಜಿಣ , ಐತ , ಮೊಡಂಕಿಲ - ಹಿಂದಿನ ದಿನದ ಬಿರುಗಾಳಿ ಮಳೆಯಲ್ಲಿ ಉರುಳಿ ಅಡಕೆಯ ಮರಗಳ ಮೇಲೆ ಬಿದ್ದಿದ್ದ ಒಂದು ದೊಡ್ಡ ಅತ್ತಿಯ ಮರವನ್ನು ಸವರಿ ಕಡಿಯುವ  ಕೆಲಸದಲ್ಲಿ ತೊಡಗಿದ್ದರು . ಅವರ ಹೆಣ್ಣಾಳುಗಳು - ದೇಯಿ , ಅಕ್ಕಣಿ , ಪೀಂಚಲು , ಬಾಗಿ - ತಮ್ಮ ಗಂಡಸರಿಗೆ ನೆರವಾಗಿ , ಸವರಿದ ಸೊಪ್ಪನ್ನು ಅಡಕೆಯ  ಮರಗಳ ಬುಡದ ಮೇಲುಸೊಪ್ಪಿನ  ಜಿಗ್ಗು ಮುಚ್ಚುವಂತೆ ಹೊತ್ತು ಹಾಕುತ್ತಿದ್ದರು " ಎಂಬ ಮಾತಿನಲ್ಲಿ  ಮೇಲಿನ ಕೆಲಸ ವಿಭಜನೆಯ  ಪರಿಕ್ರಮವನ್ನು ದರ್ಶಿಸಬಹುದು .
                                                                                 ಆಧುನಿಕತೆಯ ಪ್ರಭಾವದಿಂದ ದೂರವಿದ್ದು ಬಾಳಿದ ಜನರು ದುಡಿಮೆಯಲ್ಲಿಯೇ ತತ್ಪರರಾಗಿದ್ದು , ವಿದ್ಯಾಭ್ಯಾಸದ ಕುರಿತಾಗಿ ಸಾಂಪ್ರದಾಯಿಕ ಭಾವನೆಗಳು ಮನೆಮಾಡಿಕೊಂಡಿದ್ದವು .ಅದರಲ್ಲಿಯೂ  ಸ್ತ್ರೀ  ವಿದ್ಯಾಭ್ಯಾಸವಂತು " ಗಂಡುಮಕ್ಕಳಿಗೇ  ಅಪೂರ್ವವೂ , ಅಸಾಧ್ಯವೂ ಅತಿ ವಿರಳವೂ  ಆಗಿದ್ದ ಓದು ಬರಹವನ್ನು ಸ್ತ್ರೀಯರಿಗೆ ಕಲಿಸಲು ಯಾರೂ  ಒಪ್ಪುತ್ತಿರಲಿಲ್ಲ . ಹೆಂಗಸರು  ಓದು ಕಲಿಯುವದು ಗಂಡಸರು ಸೀರೆಯುಡುವದಕಿಂತಲೂ  ಹಾಸ್ಯಾಸ್ಪದವಾಗಿತ್ತು " ಎನ್ನುವ ಮಾತು ಪುಟ ೮೧ ರಲ್ಲಿ ಕಾಣ ಸಿಗುತ್ತದೆ .

ಕೊನೆಯಲ್ಲಿ ,
 ಕಾದಂಬರಿಯ ಭಾಷೆಯನ್ನು  ಗಮನಿಸಿದಾಗ , ಹಲವಾರು ಜಾತಿ, ವರ್ಗಗಳ ಜನರ ಆಡು ಮಾತು  ಬಳಕೆಯಾಗಿದೆ. ಕಾದಂಬರಿಯ ನಿರೂಪಣೆಯಲ್ಲಿ   ಕೃತಿಕಾರ ತನ್ನ ಭಾಷೆಯನ್ನು ಬಳಸಿಕೊಂಡರೂ , ಸಂಭಾಷಣೆ  ಆಯ ವರ್ಗಗಳ ಭಾಷೆಯಲ್ಲೇ ಇದೆ! ಪಡೆನುಡಿ , ಗಾದೆಮಾತು , ಕಾವ್ಯಾತ್ಮಕ ದೀರ್ಘ ವಾಕ್ಯ ಕಾದಂಬರಿಗೆ ಮೆರುಗು ನೀಡಿವೆ. 

ಗ್ರಾಮೀಣ ಮಾತಿನ ಧಾಟಿ ಅಭಿವ್ಯಕ್ತಿಗೆ ಅವರದೇ ಆದ ಭಾಷೆಯ ಬಳಕೆಗೆ ಒಂದು ಉದಾಹರಣೆ : ಪುಟ ೫೩ ರಲ್ಲಿ ಹೂವಲ್ಲಿ ವೆಂಕಟಣ್ಣನಿಗೂ  , ಹಳೆಮನೆ ಸುಬ್ಬಣ್ಣ ಹೆಗ್ಗಡೆಗೂ  ಹಂದಿಯ ವ್ಯವಹಾರದಲ್ಲಿ ನಡೆವ ಮಾತು- ಕತೆ 

" ನೀ  ಒಳ್ಳೆ ಗಿರಾಸ್ತ ಕಣೋ ! ಅಲ್ಲಾ ನಿನ್ನೆ ಬತ್ತೀನಿ  ಅಂದಾವ "

" ನಾ ಏನ್ ಮಾಡದ್ರಾ ? ಹ್ಯಾಂಗಾರೆ , ಆ ಸನಿ  ಮಕ್ಳು ಬತ್ತೀನಿ ಅಂದೋರು ಬರ್ಲೆ  ಇಲ್ಲಾ . ಕಾದೆ ಕಾದೆ ..... ಹೊತ್ತಾಗಿ ಹೋತು . ಇನ್ನೇನ್ ಮಾಡಾದು ..... ನಾಳೆ  ಬೆಳಿಗೆ  ಹೋಗಾನ  ಅಂತಾ ಹೇಳಿ ನಿಂತಬಿಟ್ಟೆ "

" ಯಾರಿಗೆ  ಹೇಳಿದ್ಯೋ ?"

" ನಿಮ್ಮ ಹೊಲೇರಿಗೇ  ಹೇಳಿದ್ದೆ "
" ನೀ ಒಳ್ಳೆ  ಗಿರಾಸ್ತ . ಅವರು ತ್ವಾಟದ ಬೇಲಿ ಮಾಡಾದ್ ಬಿಟ್ಕಂಡು ನಿನ್ನ ಹಂದಿ ಹೊರಾಕೆ ಬತ್ತಾರೆ ? ನೀ ಬೇಕಾದ್ರೆ ಒಳ್ಳೆ ಗಿರಾಸ್ತ !"

" ಹಾಂಗ್ಯಾರೆ  ಏನ್ ಮಾಡ್ಲಿ ಹೇಳಿ .... ನಿನ್  ನಾನ್ ಹೊತ್ಕಂಡ್ ಹೊ'ಬೇಕು ಅದಕ್ಕೂ ಸೈ  ಅಂತಿದ್ದೆ ಕಾಲುಂದ್  ಹಿಂಗಾತಲ್ಲ ಹೇಳಿ "
" ಏ ' ನಾತೋ ?"

" ಹಾಂಗ್ಯಾರೆ , ಆವತ್ತು ಮರಸಿಗೆ ಕೂತಿದ್ದೆ. ಹೋದ ತಿಂಗಳು ಬೆಳಕಿನಾಗೆ  ಒಂದು ಮೊಲ ಬಂತು . ಹೊಡೆದೆ , ಇಳಿದು ಹೇರಕಿಕೊಳ್ಲಾಕ್ ಹೊಗಾಕೂ ತೆವಳಿಕೂತ  ತೆವಳಿಕೂತ ಹೋಗಾಕೆ  ಸುರು ಮಾಡ್ತು , ಏಟು ಓಡಾಡ್ಸಿದ್ರೂ  ಸಿಕ್  ಒಲ್ ದು . ಬಯ್ ಲು   ತುಂಬಾ ಒಡ್ಯಾಡ್ಸಿ ಸಾಕಾಗಿ ಹೊ'ತು  ಅಂತೀನಿ . ಹ್ಯಾಂಗಾರೆ ಹಾಳು  ಮುಂಡೆದಕ್ಕೆ  ದೊಣ್ಣೆ ೕ ನೇ  ಸೈ  ಅಂತಾ ಒಂದು ಬಡಿಕೆ ತಗೊಂಡು ಜಪ್ಪದೆ . ಅದರ ಕೊರ್ಲು ಹೊಡ್ದುಬಿಡ್ತು  ನೋಡಿ . ಹ್ಯಾಂಗಂತ , ಹೆಚ್ಚಿನ ನೆತ್ರೂ ಬರ್ಲೂ  ಇಲ್ಲ..... ಅದೇ ಗಾಯ ದೊಡ್ದಾಯ್ತು , ಕಡೀಗೆ ಕುಂಟನ ಹುಣ್ಣಿಗೆ ತಿರಗ್ತೂ ..."ಭಾವಾವೇಗ , ಭಾವ ತೀವ್ರತೆ ಅದ್ಭುತ ....

                           ಪ್ರಸ್ತುತ ಸಂದರ್ಭಕ್ಕೆ ಇದನ್ನು ಅನ್ವಯಿಸಿ ನೋಡಿದಾಗ ಅನೇಕ ವೈರುಧ್ಯಗಳು ಕಂಡುಬರುತ್ತಿವೆ . ಕುವೆಂಪು ಅಂದು ಚಿತ್ರಿಸಿದ ಅಭೇದ್ಯ ಅರಣ್ಯ ಇಂದು ಉಳಿದಿಲ್ಲ . ಅಂದಿನ ಅನೇಕ ಕವಿ/ ಸಾಹಿತಿಗಳಿಗೆ " inspiration " ಆಗಿರುತ್ತಿದ್ದ ವನಸಿರಿ ಆಧುನಿಕತೆಯ ಭಯಂಕರತೆಗೆ  ಸಿಕ್ಕು ತನ್ನ ಹಸಿರಿನ ಉಸಿರನ್ನು ಕಳೆದುಕೊಳ್ಳುತ್ತಿದೆ. 

" ಹಸುರೆತ್ತಲ್ , ಹಸುರಿತ್ತಲ್ "- ಹಸುರು ಎತ್ತಲೂ ಇಲ್ಲದಾಗುತ್ತಿರುವದು ಶೋಚನೀಯ .


...........................................ಮುಕ್ತಾಯ ................................



ಚಂದ್ರಿಕಾ ಹೆಗಡೆ 

29 ನವೆಂಬರ್ 2012

ಮಲೆಗಳಲ್ಲಿ ಮದುಮಗಳು- ಕಾದಂಬರಿಯಲ್ಲಿ ಬರುವ ಮಲೆನಾಡಿನ ಜೀವನ ಚಿತ್ರಣ- ೩೦೦ ಪುಟಗಳ ಮಿತಿ

ಮಲೆಗಳಲ್ಲಿ ಮದುಮಗಳು-

                                    ಕಾದಂಬರಿಯಲ್ಲಿ ಬರುವ ಮಲೆನಾಡಿನ ಜೀವನ ಚಿತ್ರಣ- ೩೦೦ ಪುಟಗಳ ಮಿತಿ 

            ಭಾಗ- ೪
 
 ನಾಟಿ ವೈದ್ಯರ ಬಗ್ಗೇನೂ  ಕಾದಂಬರಿ ಗಮನ ಸೆಳೆಯುತ್ತದೆ. ಗ್ರಾಮೀಣ ಪರಿಸರದ ಖಾಯಿಲೆಗಳು ನಿವಾರಣೆಯಾಗಬಲ್ಲ  ಆಶಾವಾದವನ್ನು ಈ ನಾಟಿ ವೈದ್ಯರಲ್ಲಿ ಇಡುತ್ತಿದ್ದರು. ಈ ಕಾದಂಬರಿಯಲ್ಲಿ " ಕಣ್ಣಾ " ಪಂಡಿತರು ನಾಟಿ ವೈದ್ಯಕ್ಕೆ ಹೆಸರಾದ ಮಲೆಯಾಳಿ ಪಂಡಿತರು . ಸಮೀಪದಲ್ಲಿ ಲಭ್ಯವಿರುವ ಸೊಪ್ಪು, ಬೇರು , ಗಡ್ಡೆಗಳೇ  ವೈದ್ಯಕೀಯ  ಮೂಲಿಕೆ . ಇವುಗಳಲ್ಲದೆಯೇ ಮಂತ್ರ ತಂತ್ರ ಮುಂತಾದವುಗಳ ನಂಬಿಕೆಯ ಕಲ್ಪನೆಯೂ ಕಂಡುಬರುತ್ತಿದೆ. ( ಇಂದಿಗೂ )
  ಗುತ್ತಿ " ನನಗೊಂದು ಅಂತ್ರ   ಬೇಕಿತ್ರಲ್ಲೋ "ಎನ್ನುವ ಬೇಡಿಕೆಯನ್ನು ಕಣ್ಣಾ ಪಂಡಿತರಲ್ಲಿ ಇಡುತ್ತಾನೆ . ಇಂದಿಗೂ ಮಲೆನಾಡಿನಲ್ಲಿ "ತುಂಡೆ " ಹಾಕುವದು ದೃಷ್ಟಿ ತೆಗೆಯುವದು .... ಮುಂತಾದ ವಿಧಾನ ಬಳಕೆಯಲ್ಲಿರುವದನ್ನು ಗಮನಿಸಿದರೆ , ಅದರ ಪ್ರಭಾವ / ನಂಬಿಕೆಯ ಕುರಿತಾಗಿ  ಯೋಚಿಸಬಹುದು . ಮಲೆನಾಡಿನಲ್ಲಿ ಇಂದಿಗೂ  ಊರಿಗೊಬ್ಬರಂತೆ ನಾಟಿ ವೈದ್ಯರಿರುವದು - ಈ ಎಲ್ಲ ನಂಬಿಕೆ ಇನ್ನು  ಚಾಲ್ತಿಯಲ್ಲ್ಲಿರುವದಕ್ಕೆ ಸಾಕ್ಷಿ. ಜೊತೆಗೆ ಇಂದಿನ  ವಿವಿಧ ರೋಗಗಳ specialist ಇರುವಂತೆ ಒಂದೊಂದು ರೋಗಕ್ಕೆ ಮಾತ್ರ ಮೂಲಿಕೆ ನೀಡುವ ಪಂಡಿತರು ಇರುತ್ತಿದ್ದರು. ಅದು ಹೆಚ್ಚಿನ ಸಲ ಪರಂಪರಾಗತವಾಗಿ ಬಂದ ವೃತ್ತಿಯೂ  ಆಗಿರುತ್ತಿತ್ತು . ಹಾಗೇನೆ ಮೂಲಿಕೆಯ  ಬಗ್ಗೆ  ಗೌಪ್ಯ  ಕಾದುಕೊಳ್ಳುತ್ತಿದ್ದರು .
 ( ಇಂದಿಗೂ )
                                                                        ಆಹಾರ ಪಾನೀಯಗಳ ವಿಚಾರಕ್ಕೆ ಬಂದಾಗ ಆರ್ಥಿಕವಾಗಿ ದುರ್ಬಲವಾಗಿರುವವರು  ಗಂಜಿಯೂಟ ಮಾಡುತ್ತಿದ್ದರು ." ಕುಳವಾಡಿ ಸಣ್ಣನ ಮಗಳು ಪುಟ್ಟಿ ಗಂಜಿ ತಯಾರಿಸುತ್ತಿದ್ದಳು ."
" ಕೆಲಸಕ್ಕೆ  ಹೋಗುವ ಮುನ್ನ ಗಂಜಿ ಕುಡಿದು ಹೋಗುತ್ತಿದ್ದರು ." ಊಟ ಇದೇ !
                                                                         "ಈ ಕಾದಂಬರಿಯಲ್ಲಿ  ಅಷ್ಟೇ ಅಲ್ಲ  ಹೆಗ್ಗಡತಿಯಲ್ಲೂ  ಆಹಾರ -ಪಾನೀಯ ವಿಷಯಕ್ಕೆ ಬಂದಾಗ ವಿಶೇಷ  ಆಕರ್ಷಣೆಯೆಂದರೆ , ಬಾಡು, ತುಂಡು, ಗಂಜಿಯೂಟ , ಸೀ  ಊಟ , ಕಳ್ಳು , ಬಗನಿ - ಈ ರೀತಿಯ ಪದ ಬಳಕೆಗಳು ಪುಟಕ್ಕೊಮ್ಮೆಯಾದರು  ಮೇಲಿಂದ ಮೇಲೆ ಕಾಣ ಸಿಗುತ್ತವೆ. ಒಂದೊಂದು ವರ್ಗದ ಜನರ ಅಂತಸ್ತು , ಆರ್ಥಿಕ ಸ್ಥಿತಿ - ಗತಿಗಳನ್ನು ಸೂಚಿಸಬಲ್ಲವು "- ಎಂದು ಡಾ . ಗುರುಪಾದ ಮರಿಗುದ್ದಿಯವರು 
ಅಭಿಪ್ರಾಯಪಡುತ್ತಾರೆ .
                                 ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಮಲೆನಾಡಿನಲ್ಲಿ ಬಳಕೆಯಾಗುವ ಅನೇಕ ರಕ್ಷಣಾತ್ಮಕ  ವಸ್ತುಗಳು ಕಾಣಿಸಿಕೊಳ್ಳುತ್ತದೆ . ಕಂಬಳಿ ಕೊಪ್ಪೆ( ಮಳೆಯಿಂದ ರಕ್ಷಣೆ) ಗೊರಬು ( ಮಳೆಯಿಂದ  ರಕ್ಷಣೆ - ಗೊರಬಿನ ಚಿತ್ರಣ ತೇಜಸ್ವಿಯವರ ಕೃತಿಗಳಲ್ಲೂ  ಬೇಕಾದಷ್ಟು .... ಸಿಗುತ್ತವೆ.) ಹಾಳೆ ಟೊಪ್ಪಿಗೆ , ಎಲೆ ವಸ್ತ್ರ ..... ಮಳೆ  ಬಿಸಿಲುಗಳಿಂದ  ರಕ್ಷಿಸಿಕೊಳ್ಳುವ ವಸ್ತುಗಳು . ಆಯಾ ಕೆಲಸಗಳಿಗೆ ತಕ್ಕಂತೆ ವೇಷ ಧರಿಸುವದು ಇಂದಿಗೂ ಅಲ್ಲಿನ ಪರಿಸರಕ್ಕೆ ಅನಿವಾರ್ಯವೇ! ಇಂದು , ಅಂದಿನ ಕಂಬಳಿ ಕೊಪ್ಪೆಯ ಬದಲಿಗೆ ಪ್ಲಾಸ್ಟಿಕ್ ಧಾಳಿ ಇಟ್ಟರೂ  ಭಯಂಕರ ಮಳೆಯ ತಡೆಗೆ ಕಂಬಳಿ ಅತ್ಯವಶ್ಯಕವೇ  ಆಗಿರುತ್ತದೆ . ಕಾದಂಬರಿಯ  ಆರಂಭದಲ್ಲಿ ಗುತ್ತಿ ಸಿಂಬಾವಿಗೆ  ಹೊರಟಿದ್ದ. ಹೆಗಲಿಗೆ ಕಂಬಳಿ ಕೊಪ್ಪೆ ಹಾಕಿದ್ದ ಎಂಬ ಅಂಶವನ್ನು ಗಮನಿಸಬಹುದು. 
                       ಕುವೆಂಪು ಕಾದಂಬರಿಗಳು  ಮಲೆನಾಡಿನ  ಬೇಟೆಯ ಚಿತ್ರಣ, ತಂತ್ರ ವಿವರಗಳನ್ನು ನೀಡುವ ಅಪರೂಪದ ಕೃತಿಗಳಾಗಿವೆ .  ಪ್ರಾಣಿ ಬೇಟೆ ಪುರುಷರಿಗೆ ಮೀಸಲಾದರೆ , ಹಕ್ಕಿ ಮೀನುಗಳೆಲ್ಲಾ ಸ್ತ್ರೀಯರಿಗೆ  ಮಕ್ಕಳಿಗೆ ಪ್ರಧಾನವಾಗಿತ್ತು . ಈ ಎರಡೂ ಕಾದಂಬರಿಯಲ್ಲಿ ಕಂಡು ಬರುವ  ಬೇಟೆಯ ಚಿತ್ರಣ ಮಲೆನಾಡಿಗರ ಧೈರ್ಯ  ಸಾಹಸಗಳ ಪ್ರತಿಬಿಂಬ . ಅವರ ಹೋರಾಟದ ಬದುಕಿಗೂ ಸಾಕ್ಷಿ  ಹೇಳುತ್ತವೆ. 
                                                           ಮಲೆನಾಡಿಗರು ಖಾಯಿಲೆ ಕಸಾಲೆಗಳಲ್ಲಿ ಎರಡು ರೀತಿಯ ಔಷಧ ಉಪಚಾರ ಕೈಗೊಳ್ಳುತ್ತಿದ್ದರು . ಈ ಕಾದಂಬರಿಯಲ್ಲೇ ಇದನ್ನು ಗಮನಿಸಬಹುದು . ಒಂದು ನಿಸರ್ಗೋಪಚಾರ ಮತ್ತೊಂದು ಮಂತ್ರೋಪಚಾರ . ಒಂದು ತಂತ್ರ ವಿದ್ಯೆಗೆ " ಭೂತ  ಜಕ್ಕಿಣಿ ಪಂಜ್ರೋಲ್ಲಿಗೆ ಹರಕೆ ಕೊಡುವದು ' ಎಂಬ ಪ್ರಸ್ತಾಪ , ಇಂಬಳಗಳಕಾಟ ತಪ್ಪಿಸುವದಕ್ಕೆ ಉಪ್ಪು ಸುಣ್ಣ ಮಿಶ್ರಣ ಮಾಡಿ  ಬಳಸುವದು , ಹೋಗೆ ಸೊಪ್ಪನ್ನು ಇಂಬಳಗಳ  ಮೇಲೆ ಹಾಕುವದು , ಮೈಗೆ ಗಾಯವಾಗಿ ನಂಜಾದರೆ  ಕಾಡು ಜೀರಿಗೆ ಮತ್ತು  ಅರಿಸಿನ ಅರೆದು ಗಾಯಕ್ಕೆ ಹಚ್ಹ್ಚುವದು ..... ಇತ್ಯಾದಿ.

27 ನವೆಂಬರ್ 2012

ಮಲೆಗಳಲ್ಲಿ ಮದುಮಗಳು 

                                   ಕಾದಂಬರಿಯಲ್ಲಿ ಚಿತ್ರಿತವಾಗಿರುವ ಮಲೆನಾಡಿನ ಚಿತ್ರಣ- 300 ಪುಟಗಳನ್ನು ಮಿತಿಯಲ್ಲಿರಿಸಿ .

                                                   ಭಾಗ -೩

ಆಧುನಿಕ  ಸಮಾಜದಲ್ಲಿ ಇಂದಿಗೂ ಕಾಡುತ್ತಿರುವ ಸಾಮಾಜಿಕ ಸಮಸ್ಯೆ "ವರದಕ್ಷಿಣೆ ". ಇದಕ್ಕೆ ವ್ಯತಿರಿಕ್ತವಾದ ಪದ್ಧತಿಯನ್ನು  ಕಾದಂಬರಿ ತಿಳಿಸುತ್ತಿದೆ. ನಾಯಿ ಗುತ್ತಿ  ಮುಕುಂದಯ್ಯನನ್ನು  ಕುರಿತು " ಏನ್ರಯ್ಯ ಹೆಣ್ಣು ಕೊಡೋರಿಗೇನು  ಬರಗಾಲ? ದುಡ್ದೊಂದಿದ್ರೆ ? ಕೈ ತುಂಬಾ ತೇರ ಕೊಟ್ರೆ ದಮ್ಮಯ್ಯ ಅಂತ ಕೊಡ್ತಾರೆ " ಎನ್ನುವನು . ಈ ತೆರ  ಪದ್ಧತಿ ವಿವಾಹದ ವೇಳೆ   ಮದುವೆಯ  ಗಂಡು ತಾನು ಮದುವೆಯಾಗಲಿರುವ ಕನ್ಯೆಗೆ ಕೊಡಬೇಕಾದ ಒಡವೆ , ಹಣ, ವಸ್ತು - ಕಾದಂಬರಿಯಲ್ಲಿ ಕಂಡು ಬರುವ ಈ ಪದ್ಧತಿ - ಇಂದು ಮಲೆನಾಡಿನಲ್ಲಿ ಕಾಣಬಹುದು.( ಅದರಲ್ಲೂ ಈ ಬರಹ ಬರೆದು 12 ವರ್ಷ ಕಳೆಯಿತು . ಈಗೀಗ  ಮಾವನ ಮನೆಯಲ್ಲಿ  ಇರಬಹುದಾದ  ಎಲ್ಲ ಸಾಲಗಳನ್ನು ಪೂರೈಸಿ  ಅಳಿಯ ಬರಬೇಕು.... ಕೃಷಿಕ ಅಳಿಯನಾಗಿದ್ದರೆ!)
                                      ಕುವೆಂಪು ಕಾದಂಬರಿಯಲ್ಲಿ ಕಂಡು ಬರುವ ಮಲೆನಾಡಿನ ಸ್ತ್ರೀಯರು ಆಯಾ ಜಾತಿಗಳ ಸ್ಥಿತಿ ಗತಿಗಳ  ಪ್ರತಿನಿಧಿಯಾಗಿದ್ದಾರೆ . ತಾಯಿಯಾಗಿ ,  ಸೋದರಿಯಾಗಿ, ಪ್ರೇಯಸಿಯಾಗಿ , ಒಡತಿಯಾಗಿ , ಕೂಲಿಯಾಳಾಗಿ - ಹೀಗೆ ಪ್ರೀತಿ - ಪ್ರೇಮ, ಕರುಣೆ - ದ್ವೇಷ , ನಿರಾಶೆ, ಹತಾಶೆ  ಧೈರ್ಯ ......ಎಲ್ಲವನು ಜೀವಂತವಾಗಿ ಉಸಿರಾಡಿಸುವ  ಪರಿ ಕಂಡುಬರುತ್ತದೆ .
ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಕಂಡು ಬರುವ "ವಿವಾಹ" ಪ್ರಸಂಗ ,ಆ ಪ್ರದೇಶದ ವಿವಾಹ ಪದ್ಧತಿಯ ಪ್ರತಿಬಿಂಬದಂತಿದೆ . ಇಂದಿನ  ಆಧುನಿಕ  ಯಾಂತ್ರಿಕ ಯುಗಕ್ಕೆ ಈ ಎಲ್ಲ ಆಚರಣೆಗಳು  ಕುಂಠಿತವಾಗುತ್ತ ಬಂದರೂ  ಸಂಪೂರ್ಣವಾಗಿ ಮರೆತಿಲ್ಲ . ಮಾಡುವೆ ಮನೆಯ ಹಸೆ  ಗೋಡೆಯ  ಅಲಂಕಾರ , ಸುತ್ತ ಮುತ್ತಲಿನಲ್ಲಿ  ಸುಲಭವಾಗಿ ಸಿಗಬಹುದಾದ  ತೆಂಗು , ಅಡಿಕೆಯ ಗರಿಗಳಿಂದ ಕೂಡಿದ  ಚಪ್ಪರ , ಅದಕ್ಕೆ ಅಲಂಕಾರಿಕವಾಗಿ  ಗಿಡಗಳು , ಹಣ್ಣುಗಳು , ಈ ಎಲ್ಲ  ಪರಿ ಮಧ್ಯಂತರ ಕಾಲಘಟ್ಟದಲ್ಲಿ ಸ್ವಲ್ಪ ಮರೆತಿದ್ದರೂ  ಇಂದು ಒಂದು ರೀತಿಯ " fashion " ಆಗಿ ಕಂಡು  ಬರುತ್ತಿರುವದನ್ನು ಗಮನಿಸಬಹುದು. ಆಧುನಿಕ ತಂತ್ರದ ಜೊತೆಯಲ್ಲಿಯೇ ನಿಸರ್ಗದಿಂದ ದೂರ ಹೊರಟ  ಮಾನವ ಪುನಃ ತಲುಪಿದ್ದು ಮತ್ತೆ ಅಲ್ಲಿಗೇ !
                                  ಪ್ರಾಣಿ ಸಾಕಣೆಯ  ವಿಷಯದ ಕುರಿತಾಗಿ ಹೇಳಲೇ ಬೇಕು . ಈ ಕಾದಂಬರಿ  ಆ ಸಮಯದಲ್ಲಿ ಇರುವ ಸ್ಥಿತಿ ಗತಿ ಅವಲೋಕಿಸುತ್ತದೆ . ಮಾನವ ಹಸಿವಾದಾಗ ಬೇಟೆಯಾಡಿ ತಿನ್ನುತ್ತಿದ್ದ  ಕಾಲದ ಮುಂದುವರಿಕೆಯಾಗಿ ಆತ  ಪ್ರಾಣಿ  ಸಾಕತೊಡಗುವ  ಸುದಾರಣೆಯ ಹಂತ ಹೊಸತೊಂದು ಬೆಳವಣಿಗೆ . ಅದೇ ರೀತಿ ಅದನ್ನೊಂದು ಉದ್ಯೋಗವನ್ನಾಗಿ ಸ್ವೀಕರಿಸಿದ್ದು ಗಮನಾರ್ಹ . ಅದರ  ಉಪಯೋಗವನ್ನು ಇನ್ನಿತರ ಕ್ಷೇತ್ರಗಳಿಗೆ ವಿಸ್ತರಿಸಿದ್ದು ಮಹತ್ವದ ಅಂಶ. ಈ ಕಾದಂಬರಿ ಇಂತಹ ಚಿತ್ರಣವನ್ನು ಪುಟ ೪೦ ರಲ್ಲಿ " ತುಸು ಹೊತ್ತಿನಲ್ಲಿಯೇ ಜಗುಲಿಯ ಎದುರಾಗಿ ಅಂಗಳದಲ್ಲಿದ್ದ ಒಡ್ಡಿಗಳಲ್ಲಿಯೂ , ಒಡ್ಡಿಗಳ  ಹಿಂದಿದ್ದ ಕೊಟ್ಟಿಗೆಯಲ್ಲಿಯೂ  ಗೊರಸಿನ ಸದ್ದು, ಕೊಂಬಿನ ಸದ್ದು , ದೊಂಟೆಯ ಸದ್ದು , ಹೋತದ ಸೀಗಿನ ಸದ್ದು, ಸಲಗನ  ಗುರು-ಗುರು  ಸದ್ದು , ಒಂದಾದ ಮೇಲೊಂದು ಕೇಳಿಸತೊಡಗಿತು ."....ಮಲೆನಾಡಿನ ಕೊಟ್ಟಿಗೆ - ಪ್ರಾಣಿ ಸಾಕಣೆ, ಅದರ ಮೇಲೆ ಮಲೆನಾಡಿಗರು ಇಟ್ಟಂತಹ  ಪ್ರೀತಿ -ವಿಶ್ವಾಸ  ಎಲ್ಲವನ್ನು ಕಾದಂಬರಿ ಚಿತ್ರಿಸುವದು.
                                                                                                                               ಕೊಟ್ಟಿಗೆ ದನ ಕರುಗಳಿಗೆ ಮೀಸಲಾದರೆ ದೊಡ್ಡಿ ಕುರಿ, ಕೋಳಿ ಹಂದಿಗೆ ಸೀಮಿತ . ಕಾದಂಬರಿಯಲ್ಲಿ ಕಂಡು ಬರುವ ಚಿತ್ರಣ ಇಂದಿಗೆ ವ್ಯಾಪಕವಾಗಿ ಕಂಡು ಬರದಿದ್ದರೂ  ತನ್ನ  ಅಸ್ತಿತ್ವವನ್ನು ಉಳಿಸಿಕೊಂಡು ಬಂದಿರುವದನ್ನು ಇನ್ನೂ  ಅಲ್ಲಿ ಕಾಣಬಹುದು. ಸಾಮಾನ್ಯವಾಗಿ ಅಲ್ಲಿಯೇ ಸುತ್ತ ಮುತ್ತಲಿನಲ್ಲಿ  ಸಿಗುವ ತೆಂಗಿನ ಗರಿ, ಅಡಿಕೆಯ ಸೋಗೆ , ಒಣ ಹುಲ್ಲು ಇವುಗಳನ್ನು 'ಮಾಡಿನ ' ಹೊದಿಕೆಯಾಗಿ ಉಪಯೋಗಿಸಿ , ಅಡಿಕೆಯ ಮರವನ್ನು ಸೀಳಿ ( ಇದಕ್ಕೆ ಎಂದು ಅಡಿಕೆ ಮರವನ್ನು ಕಡಿಯದೇ ಬಿದ್ದಿರುವ ಮರದ ಉಪಯೋಗ!) ಅದನ್ನು  ಇತರ ಪ್ರಾಣಿಗಳಿಂದ ಸಾಕುಪ್ರಾಣಿಗಳನ್ನು  ರಕ್ಷಿಸಲು 'ತಟ್ಟಿ "( ತಡೆ ಗೋಡೆ ) ನಿರ್ಮಿಸಲಾಗುತ್ತಿತ್ತು . ಆದರೆ ಅದಕ್ಕೆ ವ್ಯತಿರಿಕ್ತವಾಗಿ    ಈಗ ಸಿಮೆಂಟಿನ  ಗೋಡೆ, ಮಣ್ಣಿನ ನೆಲದ ಬದಲಾಗಿ ಕಲ್ಲು.... ಸಿಗೆ ಒಣ ಹುಲ್ಲುಗಳ  ಬದಲಾಗಿ  ಹೆಂಚು / ಸಿಮೆಂಟಿನ ಶೀಟ್ / ಸ್ಲಾಬ್  ಬಳಸುತ್ತಿರುವದು  ಬದಲಾದ ಮನಸ್ಥಿತಿಗಳ ಪ್ರತಿಬಿಂಬ .
                                                                                     ಹಳ್ಳ ತೊರೆಗಳು ವಿಪುಲವಾಗಿರುವ ಮಲೆನಾಡಿನಲ್ಲಿ  ಮಳೆಗಾಲವು ರಮ್ಯವಾದರೂ ಗಂಭೀರತೆಯನ್ನು  ಕಾದುಕೊಳ್ಳುವ  ದೃಶ್ಯ  ಇಲ್ಲಿದೆ. ಸಾಮಾನ್ಯ  ಮಲೆನಾಡಿಗರೆಲ್ಲರ  ಮಳೆ ಅನುಭವವನ್ನು  ಒಂದಾಗಿಸುವ ಪ್ರಯತ್ನ ಇಲ್ಲಿನ ಒಂದೆರಡು ಘಟನೆಯನ್ನು ಹೇಳುವದರ ಮೂಲಕ ಪ್ರಯತ್ನಿಸ ಲಾಗಿದೆ .

ಗುತ್ತಿ ತಿಮ್ಮಿಯನ್ನು ಕಾಣಬೇಕೆಂದು ಲಕ್ಕುಂದವೆಂಬ ಊರಿನ  ಮೂಲಕ ಹೋಗುತ್ತಿದ್ದಾನೆ .

" ಗುತ್ತಿ ಇನ್ನೂ ಸೀತೂರು  ಗುಡ್ಡದ  ನೆತ್ತಿಗೇರಿರಲಿಲ್ಲ . ಗಾಳಿ ಪ್ರಾರಂಭವಾಗಿ ಕಾಡು ಹೋ ಎನ್ನತೊಡಗಿತ್ತು . ಮುಗಿಲು  ಮೊಳಗಿತು ಮಿಂಚಿತು . ಮೊದ  ಮೊದಲು ಅಲ್ಲಿಲ್ಲೊಂದು ತೋರ ಹನಿ ಮರದೆಲೆಯ ಮೇಲೆ ಬಿದ್ದ ಸದ್ದಾಯಿತು . ( ನೆಲದ ಮೇಲಲ್ಲಾ !) ಗುತ್ತಿ ಹೆಗಲ ಮೇಲಿದ್ದ ಕಂಬಳಿ  ಕೊಪ್ಪೆಯನ್ನು  ಬೇಗ ಬೇಗನೆ ಸೂಡಿ ಕೊಳ್ಳುತ್ತಿದ್ದಾಗಲೇ  ಮುಂಗಾರು ಮಳೆ ಕಾಡೆಲ್ಲಾ ಕಂಗಾಲಾಗುವಂತೆ ದನಗೋಳಾಗಿ ಸುರಿಯ ತೊಡಗಿತು .
                                                                                        ಹಳ್ಳದ ಅಂಚಿಗೆ ಗುತ್ತಿ ಬಂದು ನಿಂತು ನೋಡಿದಾಗ ಕತ್ತಲೆಯಲ್ಲದೆ ಮತ್ತೇನೂ ಕಾಣಿಸಲಿಲ್ಲ. ನೀರಿನ ಭೋರಾಟದಿಂದಲೇ  ಹಳ್ಳದ ಏರಿಕೆಯನ್ನು ಊಹಿಸುತ್ತಾ ನಿಂತಿದ್ದಾಗ ಒಂದು ಸಾರಿ ಮಿಂಚಿತು. ವೈರಿ ದಳದ ಮೇಲೆ ರಭಸದಿಂದ ದಾಳಿ ನುಗ್ಗುವ ತುರಗ ಸೇನೆಯಂತೆ ಉನ್ಮತ್ತ ವೇಗದಿಂದ ಹರಿದೋಡುತ್ತಿದ್ದ  ತೊರೆಯ ತೆರೆಗಳು ಪಳ ಪಳನೆ  ಮಿಂಚಿದವು . ಹೊನಲಿನ ಮಧ್ಯೆ ವೇಗವಾಗಿ ಮರದ ತುಂಡುಗಳು  ಕಸ ಕಡ್ಡಿಗಳೂ ಅದರ ರಭಸಕ್ಕೆ ಸಾಕ್ಷಿಯಾಗಿದ್ದವು . ಬೇಸಗೆಯಲ್ಲಿ ಒಂದೆರಡು ಅಡಿಯಗಲವಾಗಿರುತ್ತಿದ್ದ ಆ ಹಳ್ಳ ಈಗ ಸುಮಾರು  ಇಪ್ಪತ್ತೈದು  ಮೂವತ್ತು  ಅಡಿಗಳಷ್ಟು ಅಗಲವಾಗಿ ಹರಿಯುತಿತ್ತು ."


ಮಲೆನಾಡಿನಿಂದ ದೂರ ಇದ್ದರೂ ಇನ್ನಷ್ಟು ಉಮೇದು - ವಿರಹವೂ....ಮಿಶ್ರಣ.... ಹೆಮ್ಮೆ ..... ಇವುಗಳಿಂದ ಕೂಡಿದವಳಾಗಿ 
                 ...... ಚಂದ್ರಿಕಾ ಹೆಗಡೆ ........

---------------------------------ಮುಂದುವರೆಯುವದು ----------------------------------                                                                                             

20 ನವೆಂಬರ್ 2012

ಮಲೆಗಳಲ್ಲಿ  ಮದುಮಗಳು 

                                                - - ಕಾದಂಬರಿಯಲ್ಲಿ ಚಿತ್ರಿತವಾಗಿರುವ  ಮಲೆನಾಡಿನ  ಜೀವನ ಚಿತ್ರಣ
( 300 ಪುಟಗಳ ಮಿತಿಯಲ್ಲಿ)



                                                          ಭಾಗ-2


ಮಲೆನಾಡಿನ ಅಂದಿನ ಹಲವು ಸಾಮಾಜಿಕ ಕುಂದು, ಶೋಷಣೆ , ದುರಂತಗಳ ದಾಖಲೆಯನ್ನು  ಈ ಕಾದಂಬರಿಯಲ್ಲಿ ಅವಲೋಕಿಸಬಹುದು . '' ಹೊಲೆಯರ ಕೇರಿಗೆ ಹೋಗುವದು ತಮ್ಮ ಮೇಲ್ಮೈಗೆ ಕುಂದು ಎಂದು ಒಕ್ಕಲಿಗರು ಭಾವಿಸಿದರೆ , ಉತ್ತಮರು ತಮ್ಮ ಕೇರಿಗೆ ನುಗ್ಗಿದರೆ ಅನಾಹುತವಾಗುವದೆಂದು  ಹೊಲೆಯರೂ  ಭಾವಿಸುತ್ತಿದ್ದರು. ತಿಮ್ಮಪ್ಪ ಹೆಗ್ಗಡೆ ಕೆಲಸಕ್ಕೆ ಕರೆಯಲು ಬಂದು ಕೂಗಿದಾಗ ಯಾರೂ ಉತ್ತರಿಸುವ ತಂಟೆಗೆ ಹೋಗದಿರುವದನ್ನು ನೋಡಿ ಆ ಕೇರಿಯ ಹಿರಿಯ ಕುಳವಾಡಿ 
' ಏಯ್  ಪುಟ್ಟಿ ಸಣ್ಣ ಹೆಗ್ಡೇರ ಸವ್ವರಿಬಂದ ಹಾಗೆ ಕಾಣ್ತದೇ , ಕೆಲಸಕ್ಕೆ ಕರೆಯೋಕೆ. ಎಲ್ಲರೂ ಬಿಡಾರದ ಒಳಗೆ ಇದ್ದಾರೆ. ಕೇರಿ ಒಳಗೆ ನುಗ್ಗಿದರೆ ಇಡೀ  ಕೇರಿಗೆ ಅಪಸಕುನ ! ನಮ್ಮ ದೆಯ್ಯ ದ್ಯಾವರಿಗೆ ಮುಟ್ಟು  ಚಿಟಾದ್ರೆ  ಕೇರಿಗೆ  ಕೇರೀನೇ  ತೆಗೆದು "  ಎಂದು ಎಚ್ಚರಿಸುತ್ತಾನೆ . ಇಂತಹುದೇ ಒಂದು ಚಿತ್ರ ಗೋರೂರುರವರ   ಹಳ್ಳಿಯ ಚಿತ್ರಗಳು ಮತ್ತು ಇತರ ಪ್ರಬಂಧಗಳಲ್ಲಿ ಕಂಡುಬರುತ್ತದೆ. -" ಕಾಡಿನಲ್ಲಿ ಬ್ರಾಹ್ಮಣರಿಬ್ಬರು  ದಾರಿ ತಪ್ಪಿ ಒಂದು ಇಂತಹುದೇ ಕೇರಿಗೆ ( ಆದಿ ಕರ್ನಾಟಕದ ) ಬಂದಿರುತ್ತಾರೆ. ಅವರು ಉತ್ತಮ ಜಾತಿಯವರು ಎಂದು ತಿಳಿದ ತಕ್ಷಣ ಆ ಆದಿ ಕರ್ನಾಟಕದವರು ಅಟ್ಟಿಸಿಕೊಂಡು ಬಂದು ಹೊಡೆಯಲೆತ್ನಿಸುತ್ತಾರೆ .  ಇದರಿಂದ ಉತ್ತಮರು ತಮ್ಮ ಕೇರಿಗೆ ಬಂದರೆ ಶಿಕ್ಷಿಸುವ ಚಿತ್ರಣವನ್ನು ಕಾಣುತ್ತೇವೆ. ಇಂದಿಗೆ ಆಶ್ಚರ್ಯವೆನಿಸಬಹುದಾದ  ಎಷ್ಟೋ  ಇಂತಹ ಸಾಮಾಜಿಕ  ಅಂತರಗಳು ಇಂದಿನ ಯಾವುದೋ ಕಲಾತ್ಮಕ ಚಿತ್ರಗಳಲ್ಲಿ ನೋಡುತ್ತಿದ್ದೇವೆ. ಅಥವಾ ಎಲ್ಲೋ ಇನ್ನೂ ಜೀವಂತವಾಗಿದೆಯೇನೋ !
                                                                                             ಜಾತೀಯತೆ, ಅಸ್ಪೃಶ್ಯತೆ , ಏಕಪಕ್ಷೀಯವಾದವಾಗಿರದೇ , ಮೇಲಿನಿಂದ ಕೆಳಕ್ಕೂ, ಕೆಳಗಿನಿಂದ ಮೇಲಕ್ಕೂ ಸಮಾಜದಲ್ಲಿ  ಎರಡು ರೀತಿಯ ಚಲನೆಯನ್ನು ಪಡೆದಿತ್ತು. ಜಾತೀಯತೆ ಆಚರಣೆ ಘೋರವೆಂಬುದಾಗಲಿ , ಮಾನವೀಯತೆಗೆ ಬಗೆಯುವ ಅಪಚಾರವೆಂಬುದಾಗಲಿ  ಭಾವಿಸುವ ಯಾವ ಒಂದು ಬಗೆಯನ್ನೂ  ಕಾಣಲಾರೆವು . ಇದರ ಅರ್ಥ  ಅದನ್ನು ಒಂದು ಮೌಲ್ಯವೆಂಬುದಾಗಿಯೂ  ಅವರು ಭಾವಿಸಿರಲಿಲ್ಲ . ತಲ - ತಲಾಂತರಗಳಿಂದ ಒಳಪಟ್ಟ ತಮ್ಮನ್ನು ತಾವೇ ಕಟ್ಟಳೆಗಳಿಗೆ ಒಳಗಾದ ಜನರನ್ನು ಅಲ್ಲಿ ಕಾಣಬಹುದು.
ಮಲೆನಾಡಿನಲ್ಲಿ ಬಾಲ್ಯವಿವಾಹ ಪದ್ಧತಿ ಇತ್ತು. ( ಹೆಚ್ಚು). ಗಂಡಿಗೆ ಹದಿನಾಲ್ಕು ಹೆಣ್ಣಿಗೆ ಹತ್ತು ವರ್ಷ ತುಂಬುವ ಮೊದಲೇ ಮಾಡುವೆ ಏರ್ಪಾಡಾಗುತ್ತಿತ್ತು ( ತೊಟ್ಟಿಲಲ್ಲೇ  ವಿವಾಹ ಏರ್ಪಡುವ ಸನ್ನಿವೇಶವೂ !)  ಹೀಗೆ ಮಾಡದೇ  ಹೋದರೆ ಅವರ ಪ್ರತಿಷ್ಠೆ ಕುಗ್ಗುವದು ಮತ್ತು ಅವರನ್ನು ಅಪರಾಧಿಗಳಂತೆಯೇ  ಪರಿಗಣಿಸಲಾಗುತ್ತಿತ್ತು

ಈ . ಕಾದಂಬರಿಯಲ್ಲಿ  ಕಂಡು ಬರುವ ಒಂದು ಸನ್ನಿವೇಶ , ಹಳೆಮನೆಯ ಸುಬ್ಬಣ್ಣ ಹೆಗ್ಗಡೆಗೆ ಸುಂದರಿಯಾದ ಮಗಳೊಬ್ಬಳು  ಇದ್ದಳು, ಅ ಆಕೆಯನ್ನು ಕಂಡು ತನ್ನೊಳಗೆ ಚಿಂತಿಸುವನು . ನೆರೆ ಹೊರೆಯವರು ಮಗಳಿಗೆ ವಯಸ್ಸು ಮೀರಿ ಹೋಯಿತೆಂದು ಹೇಳುತ್ತಿದ್ದರೂ  ಸುಬ್ಬಣ್ಣ ಹೆಗ್ಗಡೆಯವರಿಗೆ ಹಾಗೇನೂ  ತೋರುತ್ತಿರಲಿಲ್ಲ. " ಚೆನ್ನಾಗಿ ಕೆಲಸ ಮಾಡಿ ಹೊಟ್ಟೆ ತುಂಬಾ ತಿನ್ನುವ ಹಳ್ಳಿ ಹೆಣ್ಣು ಬೆಳೆಯುವಂತೆ ಮಂಜಮ್ಮ ಸುಪುಷ್ಟವಾಗಿ ಬೆಳೆದಿದ್ದ ಮಾತ್ರಕ್ಕೇ  ಮದುವೆಯ ವಯಸ್ಸು ಮೀರಿ ಹೋಯಿತೆಂದು ಹೇಳುವದು ಯಾವ ನ್ಯಾಯ? ಮದುವೆಯ ವಯಸ್ಸು ಮೀರುವದೆಂದರೆ ಅರ್ಥವಾದರೂ ಏನು? ಮದುವೆಯಾಗುವದಕ್ಕೆ  ಮೊದಲೇ ದೊಡ್ಡವಳಾಗಿಬಿಟ್ಟರೆ ಕಾಡಿಗಟ್ಟ ಬೇಕೆಂಬ  ಹೆದರಿಕೆ ಏನು ತಮಗೆ?"
                                                                                                      -- ಸುಬ್ಬಣ್ಣ ಹೆಗ್ಗಡೆಯವರ ಈ ವಿಚಾರವನ್ನು ಗಮನಿಸಿದಾಗ ಆ ಕಾಲದಲ್ಲಿ ಬ್ರಾಹ್ಮಣರಲ್ಲಿ , ವಯಸ್ಸಿಗೆ ಬಂದಾಗ ವಿವಾಹವಾಗದಿದ್ದಲ್ಲಿ  ಮನೆಯಿಂದ ಹೊರಕ್ಕೆ ಹಾಕುತ್ತಿದ್ದರೇ ? ಕಾಡಿಗೆ ಅಟ್ಟುವ ಪದ್ಧತಿ ಇತ್ತೇ! ಭಯದ ಪ್ರಶ್ನೆ ಇಲ್ಲಿ ಕಾಣಿಸುತ್ತಿದೆ...
 ಅಧುನಿಕ ಮಲೆನಾದಿಗನಾಗಿ ಸುಬ್ಬಣ್ಣ ಇಲ್ಲಿ ಕಂಡು ಬರುವನು. ಇಂದು ಮಲೆನಾಡು ಬಾಲ್ಯ ವಿವಾಹದ  ಕರಿ ನೆರಳಿನಿಂದ  ಮುಕ್ತವಾಗಿದೆ .  ಹೆಚ್ಚಿನ ಪಕ್ಷ  ಈ ಭಯದಿಂದಲೇ ಅದೆಷ್ಟು ಮುಗ್ಧ ಮನಸುಗಳಿಗೆ  ಸಮಾಜ ಕೊಳ್ಳಿ  ಇಟ್ಟಿತ್ತೋ ... ಅದೆಷ್ಟು ಅಪ್ಪಂದಿರ/ ಅಮ್ಮಂದಿರ  ಹಳ್ಳಿ ಹೂವುಗಳ ಬಾಡುವಿಕೆಗೆ  ಇಂಥಹ  ನಿಯಮ ಕಾರಣವಾಗಿತ್ತೋ .....



ಮುಂದಿನ ಭಾಗದಲ್ಲಿ..... " ವರದಕ್ಷಿಣೆ "


ಹಳೆಯ ಮೆಲುಕು..... ಹಳೆಯ ಪೇಪರು..... ಸಂಭ್ರಮ .....

(* ಈ ಪತ್ರಿಕೆಯಲ್ಲಿ  ಬಳಸಿಕೊಂಡ ಪುಸ್ತಕಗಳ ದಾಖಲೆಯನ್ನು  ಅಂದು ನಾನು ಮಾಡಿರದ ಕಾರಣ  ಪರಾಮರ್ಶನ  ಗ್ರಂಥ ಪಟ್ಟಿ ಕೊಡಲು ಸಾಧ್ಯವಾಗುತ್ತಿಲ್ಲ . ಆದರೂ ... ಇಷ್ಟನ್ನು ಹೇಳಬಲ್ಲೆ.... " ಸಹ್ಯಾದ್ರಿ . ಗಂಗೋತ್ರಿ "... ಈ ಎರಡು  ಕುವೆಂಪು ಅಭಿನಂದನಾ ಗ್ರಂಥವನ್ನು  ಈ ಪತ್ರಿಕೆಯ ಸಲುವಾಗಿ  ಪರಾಮರ್ಶಿಸಿದ್ದೆ.)




ಚಂದ್ರಿಕಾ ಹೆಗಡೆ 

19 ನವೆಂಬರ್ 2012

ನಾನು ಕನ್ನಡ ಸ್ನಾತಕೋತ್ತರ  ತರಗತಿಯಲ್ಲಿ ಓದುತ್ತಿದ್ದಾಗ  ಕ್ಲಾಸ್ ಸೆಮಿನಾರ್ ಗೆಂದು ಸಿದ್ಧಪಡಿಸಿದ್ದ ಒಂದು ಚಿಂತನೆ.
ತಪ್ಪು- ಒಪ್ಪು.... ತಮ್ಮದು. ಅದೇ ಯಥಾವತ್ತಾಗಿ ದಾಖಲಿಸಿದ ಹೆಮ್ಮೆ! ಆ ಪ್ರತಿ ಸಿಕ್ಕ ಖುಷಿಯಲ್ಲಿ ನಾನಿದ್ದೇನೆ. ಮತ್ತೊಂದು ವಿಚಾರವೆಂದರೆ ಈ ಪತ್ರಿಕೆಯನ್ನು ಓದಲು ಆ ಸೆಮಿನಾರ್ ನಡೆಯಲೇ ಇಲ್ಲ! ಅದಕ್ಕೆ ಫ್ರೆಶ್ ಆಗಿಯೇ ಇದೆಯೇನೋ :)



 

ಮಲೆಗಳಲ್ಲಿ  ಮದುಮಗಳು  

                           --ಕಾದಂಬರಿಯಲ್ಲಿ ಚಿತ್ರಿತವಾಗಿರುವ ಮಲೆನಾಡಿನ ಜೀವನ ಚಿತ್ರಣ ( 300 ಪುಟಗಳನ್ನು ಮಿತಿಯಲ್ಲಿರಿಸಿ)
                                                   
                                            ಭಾಗ -1 


ಕುವೆಂಪುರವರು ಎರಡೇ ಕಾದಂಬರಿಗಳನ್ನು ಬರೆದರೂ ಅವು ಮಹತ್ಕೃತಿಗಳಾಗಿವೆ . ಎರಡೂ ಕಾದಂಬರಿಗಳ ಕಥೆ , ನಿರೂಪಣಾ  ವಿಧಾನ , ಪ್ರಾದೇಶಿಕತೆ , ಪಾತ್ರ - ಮುಂತಾದ ಅಂಶಗಳಲ್ಲಿ  ಮಲೆನಾಡಿನ ಹಿನ್ನಲೆಯನ್ನು ಕಾಣುತ್ತೇವೆ .ಮಲೆನಾಡಿನ ಜೀವನವನ್ನು ವ್ಯಾಪಕವಾಗಿ ಅದರ ಎಲ್ಲಾ ಸಂಕೀರ್ಣತೆ , ಜಟಿಲತೆಗಳನ್ನು  ಸೂಕ್ಶ್ಮವಾಗಿ ವಿವರವಾಗಿ ತಿಳಿಸುತ್ತಾರೆ. ಎರಡೂ ಕಾದಂಬರಿಗಳೂ ಕಾದಂಬರಿ ಪ್ರಿಯರಿಗೆ ಕಥೆ/ ಪಾತ್ರ ಪ್ರಪಂಚ/ ಹೀಗೆ ಕಥೆಯ ಹಿನ್ನೆಲೆಯಲ್ಲಿ ಇಷ್ಟವಾದರೆ , ನಾಟಕ ಮಿತ್ರರಿಗೆ ಸಂಭಾಷಣೆ , ಓಘ, ನಾಟಕೀಯತೆ  ಮನ ಗೆಲ್ಲಬಹುದು. ಪರಿಸರ ಚಿಂತಕರಿಗೆ ಒಂದಿಷ್ಟು ಹೊಸ ಭಾವ ಮೂಡಬಹುದು. ಪರಿಸರ ವಿಜ್ಞಾನಿಗಳಿಗೆ ಹೀಗೂ ಇದೆಯೇ...ಎಂಬ ಆಶ್ಚರ್ಯ ! ಮಲೆನಾಡಿನಿಂದ ಬಂದ ನನ್ನಂಥವರಿಗೆಂತೂ ...ಊರಿನ ಘಟನೆಯ ಸುಂದರ ದಾಖಲೆಯ ಹಾಗೆ ಕಾಣಲೂ   ಸಾಧ್ಯ!

                                                                                            ಮಲೆನಾಡಿಗರೆಲ್ಲರೂ ಕುವೆಂಪು ಆಗಲಿಲ್ಲ... ಆಗಲೂ ಸಾಧ್ಯವಿಲ್ಲ . " ಕುರುಡನುಂ  ಕನ್ನಡಿಗೊಡೆಯನಾದ  ಮಾತ್ರದಿಂ ಕಾಣ್ಬನೇಂ ? ಎಂಬಂತೆ , ಪ್ರಕೃತಿಯ  ಸೂಕ್ಶ್ಮತೆಗಳನ್ನು ಅವಲೋಕಿಸುವ ದೃಷ್ಟಿ , ಅಭಿವ್ಯಕ್ತಿಸುವ ಮಾಧ್ಯಮ ಸಹಕಾರವೂ  ಅಗತ್ಯ .
                                                                                                  ಪಂಪನ  ಬನವಾಸಿಯ  ವರ್ಣನೆಯಂತೆ ಕುವೆಂಪುರವರ 'ಮಲೆನಾಡಿನ ಬಣ್ಣನೆ '  ಈ ರೀತಿ :
" ಹೋಗುವೆನು  ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ
ಮಲೆಯ ನಾಡಿಗೆ, ಮಳೆಯ ಬೀಡಿಗೆ , ಸಿರಿಯ ಚೆಲುವಿನ ರೂಡಿ ಗೆ
ಬೇಸರಾಗಿದೆ ಬಯಲು , ಹೋಗುವೆ ಮಲೆ ಯ ಕಣಿವೆಯ ಕಾಡಿಗೆ
ಹಸುರು ಸೊಂಪಿನ , ಬಿಸಿಲ ತಂಪಿನ ,  ಗಾನದಿಂಪಿನ  ಕೂಡಿಗೆ !

ಕುವೆಂಪು " ಮಲೆನಾಡಿನ ಚಿತ್ರಗಳು " ಕೃತಿಯ ಮುನ್ನುಡಿಯಲ್ಲಿ ಹೀಗೆ ಹೇಳುವರು :"ನೆನಹು ಬಾಳಿನ ಬುತ್ತಿ.ಮನಸ್ಸಿಗೆ ಜೀವನದ ಅನುಭವಗಳನ್ನು ಆಯ್ದುಕೊಳ್ಳುವ ಶಕ್ತಿಯಿದೆ . ತನಗೆ ಬೇಕಾದುದನ್ನು ಅದು ಹಿತವಾಗಿರಲಿ , ಅಹಿತವಾಗಿರಲಿ - ಉಳಿಸಿಕೊಂಡು ಉಳಿದುದನ್ನು ಮರೆತುಬಿಡುತ್ತದೆ .ಜೀವನ ಸಂಪತ್ತು ಅದರ ಅನುಭವಗಳಲ್ಲಿ ಇದೆ. ನೆನಪು ಆ ಅನುಭವಗಳ ನಿಧಿ ."
ಕುವೆಂಪು ಕೃತಿ ಎಷ್ಟೋ ಸಲ ಜೀವನ ಚರಿತ್ರೆಯ ಹಾಗೆ ಕಾಣುವದು ಇದಕ್ಕೆನೋ !

ಇದೇ  ಕೃತಿಯಲ್ಲಿ ಮುಂದುವರೆದು  ಹೇಳುತ್ತಾರೆ :
"ನಮ್ಮ ಮನೆ ಪರ್ವತಾರಣ್ಯಗಳ ತೊಡೆಯ ಮೇಲೆ ಕೂತಿದೆ  ಎಂಬ ವಿಚಾರವನ್ನು ನೀವು 'ಚಿತ್ರ'ಗಳಿಂದ ತಿಳಿಯುತ್ತೀರಿ .
( ಚಿತ - ಮಲೆನಾಡಿನ ಚಿತ್ರಗಳು  ಕೃತಿಯಲ್ಲಿದೆ .) ಮನೆಯ ತೆಂಕಣ ದಿಕ್ಕಿಗೆ , ಮನೆಗೆ ಮುಟ್ಟಿಕೊಂಡೇ  ಏರಿ ಏರಿ ಹೋಗುವ ಬೆಟ್ಟದೋರೆಯಿದೆ . ಐದು ನಿಮಿಷದಲ್ಲಿಯೇ ಅದರ ನೆತ್ತಿಗೆ ಹೋಗಬಹುದು .ನೆತ್ತಿಯಲ್ಲಿ ವಿಶಾಲವಾದ ಬಂಡೆಗಳಿದ್ದು  ಸುತ್ತಲೂ ಸ್ವಲ್ಪ ಬಯಲಾಗಿ, ದೂರದ ದೃಶ್ಯಗಳನ್ನು ನೋಡಲು ಅನುಕೂಲವಾಗಿದೆ .( ಮಲೆಗಳಲ್ಲಿ ಮದುಮಗಳು  ಕೃತಿಯಲ್ಲಿ ಬರುವ " ಹುಲಿಕಲ್ಲು "ವರ್ಣನೆಯೂ ಹೀಗೆ ಇದೆಯಲ್ಲಾ !)
  ಕುವೆಂಪು " ಮಲೆಗಳಲ್ಲಿ ಮದುಮಗಳು " ಕೃತಿಯ ಸನ್ನಿವೇಶಗಳನ್ನು ಒಂದೇ ತನ್ಮಯತೆಯಿಂದ ಚಿತ್ರಿಸುತ್ತಾ ಹೋಗುತ್ತಾರೆ . ಇಲ್ಲಿ ಯಾರನ್ನೂ  ನಿರ್ಲಕ್ಷಿಸುವಂತಿಲ್ಲ . ನಾಯಕನ ಪಾತ್ರದಲ್ಲಿ ಪೈಪೋಟಿ ಇರುವಂತಿದೆ . ಒಂದು ಪ್ರಾಣಿಯೂ ನಾಯಕನಂತೆ ಮಹತ್ವದ ಪಾತ್ರವಾಗುತ್ತದೆ .ಅದೇ "ಹುಲಿಯ" . ಹೆಸರಿನ ಆಯ್ಕೆಯೂ ಹೆಂಗಿದೆ ನೋಡಿ. ಇದರ ಒಡೆಯ ಮತ್ತೊಬ್ಬ ನಾಯಕ 'ಗುತ್ತಿ'. ಇವರಿಬ್ಬರ ಸ್ನೇಹ ಹೇಗಿತ್ತೆಂದರೆ ಗುತ್ತಿ ಕರೆಯಲ್ಪಡುತ್ತಿದ್ದುದು 'ನಾಯಿ ಗುತ್ತಿ" ಎಂದು!
ಮಲೆನಾಡಿನ ದಿನ ಗಂಭೀರ , ದಟ್ಟ , ಗಹನ ಸ್ವರೂಪದಂತೆಯೇ , ತುಂಬ ಸಂಕೀರ್ಣವಾದ ಜೀವನ , ನಿಗೂಢತೆ  ಈ ಕೃತಿಯದು . ಮಲೆನಾಡಿನ ಬದುಕಿನ ಎಲ್ಲ ಸಾಧ್ಯತೆಗಳನ್ನು ಕುವೆಂಪು ಕಂಡರಿಸುತ್ತಾರೆ .
ಇವುಗಳನ್ನು ನೋಡುವ ಒಂದು ಸಣ್ಣ ಪ್ರಯತ್ನ ಇಲ್ಲಿದೆ.

-----------------ಮುಂದಿನ ಭಾಗದಲ್ಲಿ ಮುಂದುವರಿಸುವೆನು.

ಚಂದ್ರಿಕಾ ಹೆಗಡೆ .

 






15 ಸೆಪ್ಟೆಂಬರ್ 2012

ಸಾಮಾನ್ಯ ಜನರ ಚಿಂತನೆಗೆ ತೆರೆದುಕೊಳ್ಳದ ಹಲವು  ವಿಚಾರಗಳು ಸನದಿಯವರ ಕಾವ್ಯದ ಸಾಲುಗಳಾಗಿವೆ ಎನ್ನುವದರಲ್ಲಿ ಸಂಶಯವಿಲ್ಲ. ಅವರ  " ಅಮೆರಿಕೆಯ ಬರಿ ಮೈಗಳು " ಕವಿತೆಯಿಡೀ ಅಮೆರಿಕೆ ಸಂಸ್ಕೃತಿಯನ್ನು ಅನಾವರಣಗೊಳಿಸುತ್ತದೆ. ಅಷ್ಟೇ ಅಲ್ಲ, ಕವಿತೆಯ ಕೊನೆಯ ಸಾಲುಗಳು ಕವಿತೆಯಲ್ಲಿ ಅಡಗಿರುವ  ಜಾಗತಿಕ ಜ್ಞಾನ _ ಸಂಸ್ಕೃತಿಯ ಗಮನಿಸುವಿಕೆಗೆ ಸಾಕ್ಷಿಯಾಗುತ್ತವೆ.
                                                           " ಇಲ್ಲಿಯ ಬರಿ ಮೈ ಚೆಲುವನ್ನು ಕಂಡು 
                                                              ಸುರಿಸುವದಿಲ್ಲ ಯಾರೂ ಜೊಲ್ಲು
                                                              ಮಾಡುವದಿಲ್ಲ ಯಾರಿಗೆ ಯಾರು ಗುಲ್ಲು!"
ಎಂಬ ಲೋಕ ಚಿಂತನೆ ಅಥವಾ ಅಲ್ಲಿಯ  ಸಾಮಾನ್ಯ ಜೀವನ ಪದ್ಧತಿಯು ಅನ್ಯ ದೇಶಿಗರಿಗೆ ಅಸಭ್ಯವಾಗಿ ಕಂಡರೆ ಅಲ್ಲಿಯವರಿಗೆ ಅದು ಹೊಸತೇನಲ್ಲ ಎಂಬ ವಿಚಾರವನ್ನು ಕವಿತೆ ಧ್ವನಿಸುತ್ತದೆ.
     
                               ಸನದಿಯವರ ಶಬ್ದ ಸಂಸಾರದ ಒಂದು ಕವಿತೆ " ಅಮೆರಿಕೆಯಲ್ಲಿ ಕಂಡ ಕನಸು " ಈ ಕವಿತೆ ಬೇಂದ್ರೆಯವರ " ಕಣಸಿನೊಳಗೊಂದು ಕಣಸು" ಹಾಗು ಕುವೆಂಪು ಅವರ " ಕಲ್ಕಿ" ಕವಿತೆಯನ್ನು ಮತ್ತೆ ಮತ್ತೆ ಅನುರಣನಗೊಳಿಸುವಂತಿದೆ. ಸುತ್ತಣ ಜಗತ್ತಿನ  ಆಗು ಹೋಗುಗಳಿಗೆ ಸ್ಪಂದಿಸುವ ಹೃದಯವಂತ ಕವಿ ಮನಸ್ಸು ಇಲ್ಲೆಲ್ಲಾ ' ವಿಶ್ವ ಮಾನವ ಹೃದಯ"ಕ್ಕೆ ತೆರೆದುಕೊಳ್ಳುತ್ತಿದೆ.
ಪ್ರಕೃತಿಯಾರಾಧಕರಾಗಿ ಕವಿತೆಯಲ್ಲಿ  ಕಾಣಸಿಗುವ ಸನದಿಯವರು ಮುಂಬೈನಲ್ಲಿ ಎಷ್ಟೋ  ವರುಷ ಕಡಲ ತಡಿಯ ಸಾಹಚರ್ಯದಲ್ಲಿ ಇದ್ದವರು. " ದುಬೈನಲ್ಲೊಂದು ಸಂಜೆ" ಯಲ್ಲಿ ಮಳಲತಡಿಯಲ್ಲಿ ಮಲಗಿದ ಕವಿ  ಸುತ್ತಣ ವಾತಾವರಣವನ್ನು ಅನುಭವಿಸುತ್ತ ಆಗಸದ  ಚಿತ್ರಮಾಲೆಯನ್ನು ಗಮನಿಸುತ್ತ ಏಳಲು ಮನಸ್ಸಾಗುತ್ತಿಲ್ಲ ಎನ್ನುವರು. 
"ಆಗಸದ ಆಲ್ಬಮ್ ನೋಡುತ್ತ " ಇಲ್ಲೇ ಇರಲೇ ಎಂದು ಪ್ರಶ್ನಿಸುವದರಲ್ಲೇ  ನಿಸರ್ಗಾರಾಧಕರಾಗಿ ಕಾಣಸಿಗುತ್ತಾರೆ.  " ಅರಬ ಸೀಮೆಯ ಹಾಡು" ಅರಬ್ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಬೇರೆ ಬೇರೆ ರಾಷ್ಟ್ರಗಳ ದುಡಿಯುವ ಮನಸ್ಸುಗಳ ನೋವು_ವಿರಹ_ ಅನಿವಾರ್ಯತೆಗಳ ಧ್ವನಿ ಇಲ್ಲಿ ಕೇಳಿಸುತ್ತಿದೆ. ಹೊರಗಿನ ರಾಷ್ಟ್ರಗಳ " ಕಾಯಕ_ ಕೈಲಾಸ "ಎನ್ನುವ  ದುಡಿವ ವರ್ಗಗಳ  ಮನದಾಳದ ನೋವು " ನುಂಗಿ " ಸಹಿಸಿಕೊಳ್ಳುವ ಅನಿವಾರ್ಯತೆಯ  ದಾರುಣ ದಾಖಲೆಯೆನಿಸುತ್ತಿದೆ.
" ಹೊಟ್ಟೆ ತುಂಬಿದ್ದರೂ ಹೃದಯದುಪವಾಸಿಗಳು!" ಎನ್ನುವಲ್ಲಿ ತನ್ನವರನ್ನು _ತಮ್ಮ ನೆಲವನ್ನು ಬಿಟ್ಟು ಬಂದು ಎಷ್ಟೋ ದೂರದಲ್ಲಿ ಇರುವ ತಮ್ಮವರಿಗಾಗಿ ಹಂಬಲಿಸುತ್ತ , ದುಡಿಯುತ್ತ ದಿನ ದೂಡುತ್ತಿರುವ       ದುಡಿವ ವರ್ಗದವರ " ಕಳೆದುಕೊಳ್ಳುತ್ತ- ಪಡೆಯುವಿಕೆ"ಯತ್ತ ಕವಿ ದೃಷ್ಟಿಹಾಯಿಸುತ್ತಾರೆ.

ಸಮಾಜಮುಖಿಯಾದ  ಕವಿ ಹೊಸ ಶಬ್ದ ಸಂಸಾರದ ಯಶಸ್ವೀ ನಾವಿಕನಾಗಿ ಇಡಿ ಸಂಕಲದ ಓದುವಿಕೆಯಲ್ಲೆಲ್ಲಾ ಕಾಣಿಸಿಕೊಳ್ಳುತ್ತಾರೆಂದರೆ  ಕವಿ ಕವಿತೆಯಲ್ಲಿ ಅದೆಷ್ಟು ತಾದಾತ್ಮ್ಯದಿಂದ ಭಾವಗಳನ್ನು ಸಾಲುಗಳನ್ನಾಗಿ ಹೆಣೆದಿದ್ದಾರೆ ಎಂಬುದು ವೇದ್ಯವಾಗುತ್ತದೆ.


ಚಿಕ್ಕ  ಪ್ರಯತ್ನ ..... ಒಂದು ಮೇರು ಕವಿಯ ಅನನ್ಯ ಸಾಲುಗಳಿಗೆ.


ನಮಸ್ಕಾರ.... ಹಾರೈಕೆ ಇರಲಿ ಸದಾ.....


ಚಂದ್ರಿಕಾ ಹೆಗಡೆ

15 ಜನವರಿ 2012

ಎಲ್ಲರಿಗೂ ಸಂಕ್ರಮಣದ ಶುಭಾಶಯಗಳು ....

ಎಳ್ಳು ಬೆಲ್ಲದ ಸವಿ ಎಲ್ಲರ ಜೀವನದ ಪ್ರತಿ ಸಮಯವಾಗಲಿ...
ಸರ್ವ ಹಿತ ಬಯಸುವ ಮನಸು ಎಲ್ಲರಲ್ಲಿ
ಮೂಡಿ ಬರಲಿ...
ತಾವು ಸಿಹಿ ತಿಂದು ಇನ್ನೊಬ್ಬರಿಗೆ ಸಿಹಿ ಹಂಚುವ ಇಂದಿನ ಮನಸ್ಸು ಮುಂದಿನ ದಿನಗಳಲ್ಲೂ ಇದ್ದರೆ ಜಗವೆಸ್ಟು ಸುಂದರ!
ವಾತಾವರಣ ವನ್ನು   ನೋಡಿ ಹಬ್ಬ- ತಿನಿಸು- ಆಚರಣ ಕ್ರಮ ಅನುಸರಿಸುತ್ತ ಇದ್ದ ಅಂದಿನ ಹಿಂದಿನ ಜನ ಅದೆಷ್ಟು ಬುದ್ಧಿವಂತರಾಗಿದ್ದರು...
ಒಂದೊಂದು ಕಾಲಕ್ಕೆ ಇಂತಿಂಥ ತಿನಿಸು ಎಂದು ಪದ್ಧತಿಯ ಪರಿಕ್ರಮ ಅದೆಷ್ಟು  ಅರ್ಥಪೂರ್ಣ...

ಇಂಥದ್ದೇ ಹಲವು ವಿಚಾರ ನಿಮ್ಮನ್ನು ಕಾಡಿರಲೇ ಬೇಕು.....


ಚಿಂತನೆಯ ಜಾಡು...ಹಿಡಿದು


ಚಂದ್ರಿಕಾ ಹೆಗಡೆ